ತಪ್ಪು ಅರ್ಥ ಮಾಡಿಕೊಳ್ಳದಿರಲು ಸಿ.ಎಂ.ಮನವಿ
Posted on 11 November 2009 by Venkatesh
ಮಲೈಮಹದೇಶ್ವರ ಬೆಟ್ಟ,11-ರಾಜಕಾರಣದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಬರುವದು ಸಹಜವಾಗಿದೆ. ಈ ಬಗ್ಗೆ ತಪ್ಪು ಅರ್ಥ ಕಲ್ಪಿಸಿಕೊಳ್ಳುವದು ಬೇಡ ರೆಡ್ಡಿ ಸಹೋದರರು ನನ್ನ ಸಹೋದರರಿಂದ್ದಂತೆ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಬಿಕ್ಕಟ್ಟು ಬಗೆಹರಿದ ಹಿನ್ನೆಲೆಯಲ್ಲಿ ನಿನ್ನೆ ತಾಯಿ ಚಾಮುಂಡೇಶ್ವರಿ ಸನ್ನಿದಾನಕ್ಕೆ ಭೆಟ್ಟಿ ನೀಡಿ ಪೂಜೆ ಸಲ್ಲಿಸಿದ ನಂತರ ಇಂದು ಬೆಳಿಗ್ಗೆ ಚಾಮರಾಜ ನಗರ ಜಿಲ್ಲೆಯ ಮಹಾದೇಶ್ವರ ಬೆಟ್ಟಕ್ಕೆ ಭಟ್ಟಿ ನೀಡಿ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದ ಅಭಿವೃದ್ದಿಗಾಗಿ ರೆಡ್ಡಿ ಸೋದರರು ಹಾಗೂ ಇನ್ನಿತರ ಶಾಸಕರ ಪ್ರೌತ್ಸಾಹ ಪಡೆದು ಕೆಲಸ ನಿರ್ವಹಿಸಲಾ ಗುವದು ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಲು ನಾನು ಹೋಗುವದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಪಕವಾಗಿ ಆಡಳಿತ ನಡೆಸಲು ಮುಂದಾಗುವದಾಗಿ ಹೇಳಿದರು.
ಅರಣ್ಯ ಸಂರಕ್ಷಣೆ:
ರಾಜ್ಯದಲ್ಲಿ ಪರಿಸರ ಅರಣ್ಯ ಸಂಪತ್ತು,ಗಣಿ ಸಂಪತ್ತು ಉಳಿಸಿಕೊಳ್ಳಲು ಪ್ರಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದ ಅವರು ವರದಿಗಾರರ ಪ್ರಶ್ನೆಗೆ ಉತ್ತರಿಸಿ ನಿನ್ನೆ ಮಾಧ್ಯಮಗಳಲ್ಲಿ ಅರಣ್ಯ ಮತ್ತು ಗಣಿ ಸಂಪತ್ತು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂಬ ವರದಿ ಪ್ರಕಟವಾಗಿರುವುದು ಸರಿಯಲ್ಲ. ಇದನ್ನು ಮಾಧ್ಯಮದವರು ತಿರುಚಿ ಬರೆದಿದ್ದಾರೆ ಎಂದರು.
ಅಕ್ರಮವಾಗಿ ಎಲ್ಲಿಯೇ ಗಣಿಗಾರಿಕೆ ನಡೆಯುತ್ತಿದ್ದರೂ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವದು ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಕ್ತವಾದ ಸೂಚನೆಗಳನ್ನು ನೀಡಲಾಗಿದೆ. ಎಂದರು.
ರಾಜ್ಯದಲ್ಲಿ ಏಕಾಏಕಿಯಾಗಿ ಉದ್ಭವಿಸಿದ ಬಿಕ್ಕಟ್ಟನ್ನು ಬಗೆಹರಿಸಲು ವರಿಷ್ಠ ಮಂಡಳಿ ಕೆಲವು ಸೂತ್ರಗಳನ್ನು ನೀಡಿದೆ. ಆ ಸೂತ್ರಗಳು ಸಮಂಜಸವಾಗಿವೆ. ವರಿಷ್ಠ ಮಂಡಳಿ ತೆಗೆದುಕೊಳ್ಲುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಸಂಪುಟ ಪುನರಚನೆಯ ಬಗ್ಗೆ ತಲೆ ಕೆಡಿಸಿಕೊಳ್ಳುವದಿಲ್ಲ ಸಮನ್ವಯ ಸಮೀತಿಯ ಸಭೆಯಲ್ಲಿ ಚರ್ಚೆ ನಡೆಸಿ ವರಿಷ್ಠರು ಸೂಕ್ತ ನಿರ್ಧಾರವನ್ನು ತೆಗದುಕೊಳ್ಳುತ್ತಾರೆ ಎಂದರು.
ಇದೇ 16 ರಿಂದ ಆರಂಭವಾಗುವ ಪಂಚಲಿಂಗ ದರ್ಶನ ಉತ್ಸವ ಅದ್ದೂರಿಯಾಗಿ ನಡೆಯುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕೊಟ್ಯಾಂತರ ರೂಪಾಯಿ ಮಂಜೂರು ಮಾಡಲಾಗಿದೆ. ಇದೇ 15 ರಂದು ನಾನು ತಲಕಾಡಿಗೆ ಭೆಟ್ಟಿ ನೀಡಿ ಕಾಮಗಾರಿಗಳನ್ನು ವಿಕ್ಷಿಸುವುದಾಗಿ ಹೇಳಿದರು.
