ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರದ ಷೋ
Posted on 06 June 2010 by murthy
ಬೆಂಗಳೂರು, ಜೂ.5: ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಮೇಕಪ್ ಮಾಡಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿಯನ್ನು ಮಾಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಜನರಿಗೆ ನೆಟ್ಟಗೆ ವಿದ್ಯುತ್ ಕೊಡ್ತಾಯಿಲ್ಲ ರಾಜ್ಯ ಕಗ್ಗತ್ತಲೆಯಲ್ಲಿದೆ. ಮನೆ ಕಳೆದುಕೊಂಡಿರುವ ಮನೆ ನೆರೆ ಸಂತ್ರಸ್ತರ ಗೋಳು ಕೇಳುವವರೆ ಇಲ್ಲದಂತಾಗಿದೆ. ಅವರಿಗೆ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ಟೀಕಾ ಪ್ರಹಾರ ಮಾಡಿದರು.
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣಾ ಅವರಂತೆ ಸೂಟುಬೂಟು ಹಾಕಿ ಮೇಕಪ್ ಮಾಡಿಕೊಂಡು ಸಮಾವೇಶದಲ್ಲಿ ಮಿಂಚಿದ್ದೆ ದೊಡ್ಡ ಭಾಗ್ಯವಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
4 ಲಕ್ಷ ಕೋಟಿ ರೂಪಾಯಿ ಬಂಡವಾಳ 10 ಲಕ್ಷ ಜನರಿಗೆ ಉದ್ಯೌಗ ಇದೆಲ್ಲ ಬರಿ ಬೋಗಳೆಯಾಗಿದೆ ಕೈಗಾರಿಕೆ ಹೆಸರಿನಲ್ಲಿ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಾವು ಅವಕಾಶ ನೀಡುವದಿಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ರೈತರು ತಜ್ಞರು ರಾಜಕಾರಣಿಗಳೊಂದಿಗೆ ಚರ್ಚೆ ಮಾಡಿ ಒಂದು ಸಮಗ್ರ ನೀತಿಯನ್ನು ಜಾರಿಗೆ ತರಬೇಕು ಈಗಿನ ಸರ್ಕಾರದ ನೀತಿ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವಂತೆ ಇದೆ ಎಂದರು.
ರಾಜ್ಯಪಾಲರ ಬಗ್ಗೆ ಭಾಜಪ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿರುವುದು ಅವರ ಘನತೆಯ ತಕ್ಕದ್ದಲ್ಲ ಭಾರಿ ಗರ್ವ ಮತ್ತು ಅಹಂಕಾರದಿಂದ ಅವರು ಮಾತನಾಡಿದ್ದಾರೆ. ಒಂದು ಪಕ್ಷದ ಅಧ್ಯಕ್ಷರು ಎಂಬುದನ್ನು ಮರೆತು ಸಚಿವ ಜನಾರ್ಧನರೆಡ್ಡಿ ಶೈಲಿಯಲ್ಲಿ ಮಾತನಾಡಿದ್ದಾರೆ ಎಂದರು. ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
