ರಾಜ್ಯಸಭೆ ಚುನಾವಣಾ ಕಣಕ್ಕೆ ಆಸ್ಕರ್
Posted on 06 June 2010 by murthy
ಬೆಂಗಳೂರು, ಜೂ.5: ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಆಸ್ಕರ ಫರ್ನಾಂಡೀಸ್ ಇಂದು ರಾಜ್ಯಸಭೆಯ ಚುನಾವಣೆಗಾಗಿ ಕಾಂಗ್ರೆಸ್ ಅಧೀಕೃತ ಅಭ್ಯರ್ಥಿಯಾಗಿ ಇಂದು ನಾಮಪತ್ರವನ್ನು ಸಲ್ಲಿಸಿದರು.
ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಈಗಾಗಲೇ ಭಾಜಪ ರಾಷ್ಟ್ತ್ರೀಯ ಉಪಾಧ್ಯಕ್ಷ ವೆಂಕಯ್ಯನಾಯ್ಡು ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಈ ಮೊದಲು ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಹೇಳಿಕೊಂಡಿತ್ತು. ಆದರೆ ಜೆಡಿಎಸ್ ಜೊತೆಗೆ ನಡೆದಿದ್ದ ಮೈತ್ರಿ ಮಾತುಕತೆಗಳು ಈಗ ಮುರಿದು ಬಿದ್ದಿರುವುದರಿಂದ ತಾನು ಗೆಲ್ಲಲು ಸಾಧ್ಯವಿರುವ ಒಬ್ಬ ಅಭ್ಯರ್ಥಿಯನ್ನಾಗಿ ಇಂದು ಆಸ್ಕರ್ ಫರ್ನಾಂಡಿಸ್ ಅವರನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಕಣಕ್ಕೆ ಇಂದು ಇಳಿಸಿದೆ.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ವಿಧಾನಸಭೆ ವಿರೋಧಿ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಪರಿಷತ್ತಿನ ವಿರೋಧಿ ಪಕ್ಷದ ನಾಯಕಿ ಮೋಟಮ್ಮ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಸದ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಧರಮ್ಸಿಂಗ್ ಹಾಗೂ ಹಲವು ಕಾಂಗ್ರೆಸ್ ಧುರೀಣರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯ ಕುರಿತು ಇದುವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಆದರೆ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಕ್ಕೆ ಇನ್ನೂ ಅವಕಾಶವಿರುವುದರಿಂದ ಅಷ್ಟರೊಳಗಾಗಿ 4ನೇ ಅಭ್ಯರ್ಥಿಯಾದ ಎಂಬುದು ನಿರ್ಧಾರವಾಗುವ ಸಾಧ್ಯತೆ ಇದೆ.
ಈಗ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಭಾರತೀಯ ಜನತಾ ಪಕ್ಷ 3ನೇ ಅಭ್ಯರ್ಥಿಯನ್ನು ತನ್ನ ಹೆಚ್ಚುವರಿ ಮತಗಳ ಬೆಂಬಲದಿಂದ ಕಣಕ್ಕೆ ಇಳಿಸುವ ಸಾಧ್ಯ ಸಾಧ್ಯತೆಗಳ ಬಗ್ಗೆ ಚಿಂತನೆಗಳನ್ನು ನಡೆಸ ತೊಡಗಿದೆ.
ಒಟ್ಟಿನಲ್ಲಿ ಒಂದೆರೆಡು ದಿನಗಳಲ್ಲಿ 4ನೇ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗುವ ನೀರೀಕ್ಷೆ ಇದೆ.
