17 ಇಲ್ಲವೇ 19 ರಂದು ಸಂಪುಟ ವಿಸ್ತರಣೆ
Posted on 07 June 2010 by murthy
ಬೆಂಗಳೂರು, ಜೂ. 6 : ಬಹುನೀರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು ಜೂನ್ 17 ಅಥವಾ 19 ರಿಂದ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಮುಂಬೈಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತಿತರರು ಸಂಪುಟ ವಿಸ್ತರಣೆ ಕುರಿತಂತೆ ರಾಷ್ಟ್ತ್ರೀಯ ಧುರೀಣರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯಸಭೆ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ 17 ರಂದು ಸಂಪುಟ ವಿಸ್ತರಣೆಯಾಗಲಿದೆ. ಒಂದು ವೇಳೆ ರಾಜ್ಯಸಭೆಗೆ ಚುನಾವಣೆ ನಡೆದರೆ 19 ರಂದು ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಭಾಜಪ ಉನ್ನತ ಮೂಲಗಳು ಹೇಳಿವೆ.
ರಾಜ್ಯಸಭೆಯ ಚುನಾವಣೆ 17 ರಂದು ನಡೆಯಲಿದೆ. ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ ಅಂದೇ ಸಂಪುಟ ವಿಸ್ತರಣೆ ನಡೆಯಲಿದೆ. ಚುನಾವಣೆ ನಡೆಯುವದು ಅನಿವಾರ್ಯವಾದರೆ ಶಾಸಕರು ಮತದಾನದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಇರುವುದರಿಂದ 19 ರಂದು ವಿಸ್ತರಣೆ ನಡೆಯಲಿದೆ.
ಈಗ ನಿರ್ಧರಿಸಿರುವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೂವರು ಸಚಿವರನ್ನು ಹೊಸದಾಗಿ ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಗಣಿ ಧಣಿಗಳ ಕೆಂಗಣ್ಣಿಗೆ ಗುರಿಯಾಗಿ ರಾಜೀನಾಮೆ ನೀಡಿದ್ದ ಶೋಭಾ ಕರಂದ್ಲಾಜೆ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ವಿ. ಸೋಮಣ್ಣ ಹಾಗೂ ಮೈಸೂರಿನ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಂಸದ ಹಾಗೂ ವಿಧಾನಪರಿಷತ್ ಸದಸ್ಯ ವಿಜಯಶಂಕರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
ಶೋಭಾ ಕರಂದ್ಲಾಜೆ ಅವರಿಗೆ ವಿದ್ಯುತ್ ಇಲಾಖೆ ಸೋಮಣ್ಣನವರಿಗೆ ವಸತಿ ಹಾಗೂ ವಿಜಯಶಂಕರ ಅವರಿಗೆ ಅರಣ್ಯ ಖಾತೆ ನೀಡುವ ಸಾಧ್ಯತೆ. ಆದರೆ ಈ ಹಿಂದೆ ಇಂಧನ ಖಾತೆ ವಹಿಸಿಕೊಂಡಿದ್ದ ಈಗ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಕೆ.ಎಸ್. ಈಶ್ವರಪ್ಪ ಇಂಧನ ಖಾತೆಯನ್ನು ತಮ್ಮ ಸಮುದಾಯದ ವಿಜಯಶಂಕರ ಅವರಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈಗ ಸಚಿವರಾಗಲಿರುವ ವಿ.ಸೋಮಣ್ಣ ಹಾಗೂ ವಿಜಯಶಂಕರ ಈಗಾಗಲೇ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಅವರು ಸಚಿವರಾಗಲು ಯಾವುದೇ ತೊಂದರೆ ಸಧ್ಯಕ್ಕೆ ಇರುವುದಿಲ್ಲ.
ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಗೊತ್ತಾದ ಕೂಡಲೇ ಸಚಿವ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದ ಶಾಸಕರು ಕತ್ತಿ ಝಳಪಿಸುವುದಕ್ಕೆ ಸಿದ್ದರಾಗ ತೊಡಗಿದ್ದಾರೆ. ಹಿರಿಯ ಶಾಸಕರಾದ ಶಂಕರಲಿಂಗೇಗೌಡ ಸಿ. ನಾರಾಯಣಸ್ವಾಮಿ. ಎ. ರಾಮದಾಸ, ಸಿ.ಟಿ. ರವಿ, ಬಿ.ಎನ್. ಜೀವರಾಜ, ಗೋಪಾಲಕೃಷ್ಣ ಬೇರೂಬ್ ಮತ್ತಿತರ ಶಾಸಕರ ಈ ಬಾರಿ ನೇರವಾಗಿಯೇ ಆಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಇದನ್ನು ಅರಿತುಕೊಂಡಿರುವ ಭಾಜಪ ಧುರೀಣ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿಯೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲು ಚಾಲನೆ ನೀಡಲಿದ್ದಾರೆ.
